Monday, March 26, 2007

ಸೆಲ್ ಫೋನ್ ಪುರಾಣ (cell-phone purANa)

ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಸೆಲ್-ಫೋನ್ ಕಾಟ ಜಾಸ್ತಿಯಗಿದೆ. ಈ ತಂತ್ರಜ್ಞಾನ ದೂರಸಂಪರ್ಕ ಕ್ರಾಂತಿಯನ್ನುಂಟು ಮಾಡಿದೆ ಎಂಬುದರಲ್ಲಿ ಸಂಶಯವಿಲ್ಲ. ವ್ಯವಹಾರ, ಉದ್ಯಮದವರಿಗೆ ಹಣ, ಸಮಯವನ್ನು ಉಳಿಸುತ್ತದೆ. ಆದರೆ ನಮ್ ದೇಶದಲ್ಲಿ ಪ್ರತಿಶತ ೭೦ ರಷ್ಟು ಜನ ಇದನ್ನು misuse ಮಾಡುತ್ತೀವಿ ಅಂತ ನನ್ ಅನಿಸಿಕೆ.

ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲೊಂದು ನಾಟಕ. ಜನ ಆಸಕ್ತಿಯಿಂದ ನೋಡುತ್ತಿದ್ದಾರೆ. ಮಧ್ಯೆ ಒಬ್ಬ ಸೂಟು-ಬೂಟು ಹಾಕಿದ್ದ ಮನುಷ್ಯನ ಸೆಲ್-ಫೋನ್ ಜೋರಾಗಿ ರಿಂಗ್ ಆಯ್ತು (ರಿಂಗ್ ಫೋನ್ ಬಗೆಗೆ ಬೇರೆಯೇ ಹರಟೆ ಬರೀಬೇಕು!). ಆ ಮನುಷ್ಯ ಇಡೀ ಸಭೆಗೆ ಕೇಳುವಂತೆ 'ಹಲ್ಲೋ, ನಾನು ಇಲ್ಲಿದೀನಿ, ನಾಟಕ ನೋಡ್ತಾ ಇದೀನಿ' ಅಂತ ಘೋಷಣೆ ಮಾಡ್ಕೊಂಡು ಮಾತು ಶುರು ಮಾಡಿದ್ರು. ರಂಗದ ಮೇಲಿದ್ದ ಕಲಾವಿದರಿಗೆ ತೊಂದ್ರೆ ಆಗಿದ್ದಲ್ಲದೆ ಅವರ ಸಂಭಾಷಣೆಗಳು ಮರೆತುಹೋದವು.

ಇನ್ನು 'ರಂಗ ಶಂಕರ'ಕ್ಕೆ ಬರುವವರು ಮತ್ತಷ್ಟು sophesticated ಜನ! ಸೆಲ್-ಫೋನ್ ರಿಂಗ್ ಗಳು ಕಡಿಮೆ. ಆದ್ರೆ ಬುದ್ಧಿವಂತ ಮಹಾಶಯರುಗಳು SMS ಟೈಪ್ ಮಾಡ್ತಾ ಇರ್ತಾರೆ.. (ಬೆಕ್ಕು ಕಣ್ಣು ಮುಚ್ಕೊಂಡ್ ಹಾಲು ಕುಡ್ಯೋ ರೀತಿ) ಆ ಕತ್ತಲೆಯಲ್ಲಿ ಅವರ ಬಣ್ಣದ screen ಯಾರಿಗೂ ತೊಂದ್ರೆ ಕೊಡಲ್ಲ ಅನ್ನೋ ಭಾವನೆಯಲ್ಲಿ!

ಮೇಲಿನೆರಡು ಘಟನೆಗಳಲ್ಲಿ ಸಹಪ್ರೇಕ್ಷಕರ ಮೇಲೆ ಸಹಾನುಭೂತಿಯ ವಿಷಯ ಇರಲಿ, ಕಲಾವಿದರಿಗೆ ಮರ್ಯಾದೆ ಕೊಡ್ಬೇಕು ಅನ್ನೋ ಕನಿಷ್ಟ ಸೌಜನ್ಯವೂ ಇಲ್ಲ ನಮ್ಮಲ್ಲಿ. ರವೀಂದ್ರ ಕಲಾಕ್ಷೇತ್ರದ ಘಟನೆಯಲ್ಲಂತೂ ಕಪ್ಪಣ್ಣನವರು (ನಾಟಕ ಅಕಾಡೆಮಿ) ಸರಿಯಾಗಿ ಉಗಿದರು 'ನಿಮ್ಮಂತೋರಿಂದ ಸಂಸ್ಕೃತಿ ಹಾಳಗತ್ತೆ, ಬರಲೇಬೇಡಿ' ಅಂತ.

ಇನ್ನು professional ರಂಗದಲ್ಲಿ..ಆಫೀಸ್ ಮೀಟಿಂಗ್ ನಲ್ಲಿ ಕೂತಿರ್ತಾರೆ. ವಿಚಿತ್ರವಾಗಿ ಫೋನ್ ಹೊಡ್ಕಳತ್ತೆ. ಅಲ್ಲೆ ಕೂತು 'ಹೆಲ್ಲೊ' ಅಂತಾರೆ. ಅದು ಸಾಮಾನ್ಯವಾಗಿ marketing ಕರೆಯಾಗಿರುತ್ತದೆ. 'I am not interested' ಅಂತ ಹೇಳಿ disconnect ಮಾಡ್ತಾರೆ! ಮೀಟಿಂಗ್ ನಲ್ಲಿ ಕೂತಿದೀವಿ ಅನ್ನೊ ಪ್ರಜ್ಞೆನೇ ಇರಲ್ಲ.

ಇನ್ನು ಭಕ್ತಿ-ನೆಮ್ಮದಿಗಾಗಿ ಧರ್ಮಸ್ಥಳಕ್ಕೆ ಬರ್ತಾರೆ. ಗುಡಿಯ ಪ್ರಾಂಗಣಕ್ಕೆ ಬಂದ ಕೂಡಲೇ ಸೆಲ್-ಫೋನ್ ಆರಿಸಿ ಎಂದು ಬರೆದಿದ್ದಾರೆ. ಮಹಾಶಯರುಗಳು ಗರ್ಭಗುಡಿಯಲ್ಲಿ ದೇವರ ಮುಂದೆ ನಿಂತು ಫೋನ್-ನಲ್ಲಿ ಮಾತಾಡ್ತಾ ಇರ್ತಾರೆ! ನೂರಾರು ಮೈಲಿ ದೂರದಿಂದ ಬಂದು, ೧-೨ ಘಂಟೆ ಕಾಲ ಸರದಿಯಲ್ಲಿ ನಿಂತು, ಸಿಗೋ ೧೦ ಸೆಕೆಂಡ್ ಕಾಲದಲ್ಲಿ ಮಂಜುನಾಥನ ದರ್ಶನ ಮಾಡೋ ಪುಣ್ಯದ ಅವಕಾಶ ಕಳ್ಕೋಬಾರ್ದು ಅಂತಾನೂ ಹೊಳೆಯಲ್ಲ ತಲೆಗಳಿಗೆ! ಮನೇಲಿ ಜಪ, ಧ್ಯಾನ ಮಾಡುವಾಗ ಕೂಡ ಸೆಲ್-ಫೋನ್ ಕಡೆ ಒಂದು ಗಮನವಿರುತ್ತದೆ.

ನಮ್ಮಲ್ಲಿ maturity ಬರೋದು ಯಾವಾಗ? ನನ್ನ ಅಮೇರಿಕ ವಾಸದ ವರ್ಷಗಳಲ್ಲಿ (ಅದೂ ನಾನಿದ್ದ high-tech ಊರಿನಲ್ಲಿ) ಯಾವತ್ತೂ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ತೊಂದ್ರೆ ಆಗೋದು ನೋಡಿಲ್ಲ. ಕೆಲವೊಮ್ಮೆ ಆಫೀಸ್ ನಲ್ಲಿ ತೊಂದ್ರೆ ಆದ್ರೂ ಅದು ದೇಸಿ ಮಿತ್ರರಿಂದ!

ಈ ಸಮಸ್ಯೆಗೆ ನನ್ನ ಮೈಸೂರು ಸ್ನೇಹಿತ ಕಂಡುಕೊಂಡ ಪರಿಹಾರ ಅನುಕರಣೀಯ. ಅವನ ಉದ್ಯಮದಲ್ಲಿ ಯಾವ ಸಮಯದಲ್ಲಿ ಕೂಡ ವ್ಯವಹಾರದ ಕರೆಗಳು ಬರತ್ತೆ. ಆದರೂ ಮತ್ತೊಬ್ಬರೊಡನೆ ಮಾತಾಡುವಾಗ, ಸಂಜೆಯ ವಾಯು ವಿಹಾರದಲ್ಲಿದ್ದಾಗ, ಮಕ್ಕಳೊಡನೆ ಆಟವಾಡುವಾಗ ಫೋನ್ ಎತ್ತಲ್ಲ. ಅವನ ಹೆಂಡತಿ ಮತ್ತು ತಾಯಿಗೆ ಅವನು ಎಲ್ಲಿ ಹೋಗುತ್ತಾನೆಂದು ತಿಳಿದಿರುತ್ತದೆ. ಅವರುಗಳು ಸುಮ್ನೆ ಎಲ್ಲಿದೀಯಾ, ಎಷ್ಟೊತ್ತಿಗೆ ಬರ್ತೀಯಾ ಅಂತೆಲ್ಲ ತೊಂದ್ರೆ ಕೊಡಲ್ಲ.

ಜನ ಸೆಲ್-ಫೋನ್ ಉಪಯೋಗಿಸಲಿ, ಆದ್ರೆ ಬೇರೆಯವ್ರಿಗೆ ತೊಂದ್ರೆ ಆಗದ ಹಾಗೆ ಉಪಯೋಗಿಸಿದರೆ ಯಾರಿಗೂ ಬೇಜಾರಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಪಯೋಗಿಸುವಾಗ ಸ್ವಲ್ಪ ಬುದ್ಧಿಯೂ ಇಲ್ಲದೆ ಎಲ್ಲರಿಗೂ ಕಿರಿಕಿರಿಯಾಗುವಂತೆ ಮಾಡುವುದು fashion-ಒ ಅಥವಾ ಮೌಢ್ಯವೋ ಗೊತ್ತಿಲ್ಲ.
ಅಕಸ್ಮಾತ್ ತುರ್ತು ಕರೆಯಾದ್ರೂ, ನಾವೇನು ಹೋಗಿ ಯಾರ್ದಾದ್ರೂ ಪ್ರಾಣ ಉಳಿಸಕ್ಕಾಗತ್ತಾ? ಅದೂ ಬೆಂಗಳೂರಿನ ಟ್ರಾಫಿಕ್ಕನ್ನು ಗೆದ್ದು!?

ನಾವೆಲ್ಲ ವಿದ್ಯಾವಂತ ಅಸಂಸ್ಕೃತರಲ್ಲವೇ?

Sunday, March 18, 2007

ಆತ್ಮರತಿ (Atmarati)

ಕೆಲವು ತಿಂಗಳ ಹಿಂದೆ ರವಿ ಬೆಳಗೆರೆಯವರ ಒಂದು ಲೇಖನದಲ್ಲಿ ಸ್ವಾರಸ್ಯಕರ ಪದದ ಪರಿಚಯವಾಯ್ತು. ಅದು 'ಆತ್ಮರತಿ' - ಅರ್ಥ ಹೀಗಿದೆ

narcissism (ನಾ) (ಅತಿಯಾದ) ಆತ್ಮರತಿ, ಸ್ವಾರಾಧನಾ ಪ್ರವೃತ್ತಿ, ತನ್ನನ್ನು ತಾನೇ ಮೆಚ್ಚಿಕೊಳ್ಳುವುದು

ಸ್ವಲ್ಪಮಟ್ಟಿಗೆ ನಮ್ಮೆಲ್ಲರಲ್ಲೂ ಇದು ಇರುತ್ತೆ ಅಥವಾ ಸ್ವಲ್ಪ ಮಟ್ಟಿಗೆ ಇರಬೇಕು ಅನ್ಸತ್ತೆ. ಆದರೆ ಎಲ್ಲರ ಜೊತೆ ಮಾತಾಡುವಾಗ (ಗುಂಪಿನಲ್ಲಿರಲಿ/ಮುಖಾಮುಖಿ ಒಬ್ಬರ ಜೊತೆಯಾಗಲಿ) ಬರೀ ನಮ್ಮ ಪುರಾಣವನ್ನೇ ಹೇಳುವುದು, ನನ್ನಿಂದಲೇ ಎಲ್ಲ ಆಗುವುದು ಅನ್ನುವುದು, corporate ನಲ್ಲಿರುವ 'market yourself' ಎಂಬ ಅಲಿಖಿತ ನಿಯಮವನ್ನು ಭಕ್ತಿಯಿಂದ ಪಾಲಿಸಿವುದು , ಇವೆಲ್ಲ ಆತ್ಮರತಿಯ ಲಕ್ಷಣಗಳು.

ನನ್ನ ಮಟ್ಟಿಗೆ ಹೇಳಬೇಕಾದರೆ ತುಂಬ ಆಪ್ತರೊಡನೆ ಮಾತಾಡುವಾಗ ನಾನು ಪ್ರತಿಶತ ೭೦ರಷ್ಟು ನಾನೇ ಮಾತಾಡ್ತೀನಿ ಅಂತ ೩-೪ ವರ್ಷಗಳ ಹಿಂದೆ ನನ್ನ ಸ್ನೇಹಿತೆಯೊಬ್ಬಳು ನನಗೆ ಹೇಳಿದ್ದಳು. ಮಾತು ನನ್ನ ಬಗೆಗೆ ಆಗಿತ್ತು ಅಂತ ಏನಲ್ಲ, ಆದ್ರೂ ನನ್ನ ಮೇಲೆ ಪ್ರಭಾವ ಬೀರಿರುವ ವ್ಯಕ್ತಿ, ಕ್ರೀಡೆ, ಕಲೆ ಬಗ್ಗೆ ಸಿಕ್ಕಾಪಟ್ಟೆ ಮಾತಾಡ್ತೇನೆ ಅನ್ನೋದು ಅವಳಭಿಪ್ರಾಯ. ಇದು ನಿಜ ಅನ್ನಿಸಿತ್ತು. ಅದಕ್ಕಾಗಿ ಕೆಲವು ಮಿತ್ರರೊಡನೆ ಚರ್ಚಿಸಿ ನನ್ನನ್ನು observe ಮಾಡಲು ಹೇಳಿ, ಅವರ ಪ್ರತಿಕ್ರಿಯೆ ಕೇಳಿ ತಿದ್ದಿಕೊಳ್ತಾ ಇದೀನಿ. ಸ್ವಲ್ಪ ಮಟ್ಟಿನ ಸುಧಾರಣೆಯಾಗಿದೆ ಈಗ ಅನ್ಸತ್ತೆ. ಗುಂಪಿನಲ್ಲಿರುವಾಗ ನಾನು ಮಾತಾಡೋದ್ ಕಮ್ಮಿ. ನನ್ನನ್ನೇ ನಾನಂತೂ market ಮಾಡ್ಕೊಳಲ್ಲ, ಮೆಚ್ಚಿಕೊಳ್ಳುವುದಂತೂ ದೂರದ ಮಾತು! ಇದರ ಬಗ್ಗೆ 'ಅಂತಿಮ ತೀರ್ಮಾನ' ಇತ್ತೀಚೆಗೆ ಸಂಪರ್ಕದಲ್ಲಿರುವ ಸ್ನೇಹಿತರೇ ಹೇಳಬೇಕು ;)

ಆತ್ಮರತಿಯ ಪರಾಕಾಷ್ಠೆ ನೋಡಬೇಕಿದ್ರೆ ನೀವು ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾದ ಡಾ|| ಮಹೇಶ್ ಜೋಷಿ ಅವರನ್ನು ನೋಡಬೇಕು. ಅವರ ಬಗ್ಗೆ ನನಗೆ ಬಹಳ ಗೌರವವಿದೆ. ದೂರದರ್ಶನದಲ್ಲಿ ಕನ್ನಡ, ಕಲೆ, ಸಂಸ್ಕೃತಿಗೆ ಸಂಬಂಧಿಸಿದ
ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇವರು ಬಂದ ನಂತರ ಚಂದನ ವಾಹಿನಿ ನಂ.೧ ವಾಹಿನಿಯಾಗಿದೆ. ತುಂಬ innovative ಮನುಷ್ಯ. ಆದರೆ ಚಂದನದ ವಿಶೇಷ ಕಾರ್ಯಕ್ರಮಗಳನ್ನು ನೀವು ನೋಡಿದ್ದರೆ ತಿಳಿಯುತ್ತೆ, ೨ ಘಂಟೆ ಕಾರ್ಯಕ್ರಮದಲ್ಲಿ ಸರಾಸರಿ ೧೫೦- ೨೦೦ ಬಾರಿ ಅವರ ಮುಖದರ್ಶನವಾಗುತ್ತೆ (ಇದು ಅವರ ಖಾಸಗಿ ವಾಹಿನಿ ಎಂಬಂತೆ!). ಇವತ್ತಿನ ಯುಗಾದಿ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ಹಾಸ್ಯದ ನಡುವೆ ಅವರ ಹಾವಭಾವಗಳ ದರ್ಶನ ಮಾಡಿಸದಿದ್ರೆ ತಮ್ಮ ಕೆಲಸ ಕಳ್ಕೋತೀವಿ ಅನ್ನೋ ಹಾಗೆ production unit ವರ್ತಿಸಿದ್ರು. ಇದು ಎಲ್ಲ ಕಾರ್ಯಕ್ರಮಗಳಲ್ಲೂ ಮಾಮೂಲು. ಚಂದನದ ಸಂಜೆ ೭:೦೦ ರ ವಾರ್ತೆಯಲ್ಲಿ ಜೋಷಿಯವರು ಹೋಗಿದ್ದ ಪುಸ್ತಕ ಬಿಡುಗಡೆ, ರಂಗ ಪ್ರವೇಶ, ನಾಟಕ, ಶಾಲಾ ಕಾರ್ಯಕ್ರಮಗಳ ನ್ಯೂಸ್ ಐಟಮ್ ಇದ್ದೇ ಇರತ್ತೆ!

ಗೊತ್ತೋ ಗೊತ್ತಿಲ್ಲದೆಯೋ ನಮ್ಮಲ್ಲೂ ಇದು ಇರತ್ತೆ. ಇದು ಇರಬೇಕೇ? ಇರಬೇಕೆಂದರೆ ಎಷ್ಟಿರಬೇಕು?

ಪತ್ರಕರ್ತ ವಿಶ್ವೇಶ್ವರ ಭಟ್ಟರು ಪತ್ರಿಕೋದ್ಯಮದ ದಿಗ್ಗಜ ರಾಮನಾಥ ಗೋಯಂಕಾ ಬಗ್ಗೆ ಹೇಳಿದ್ದು.. Indian Express ಕಟ್ಟಿ ಬೆಳೆಸಿದ ಗೋಯಂಕಾರ ಭಾವಚಿತ್ರ ಅವರ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಕೇವಲ ಒಮ್ಮೆ ಮಾತ್ರ, ಅವರು ವಿಧಿವಶರಾದಾಗ!



Friday, March 16, 2007

ಮಿಡಿಯುತಿರಲಿ ಮೌನವೀಣೆ (miDiyutirali maunavINe)

ಡಿಸೆಂಬರ್ ಕಡೆಯ ವಾರದಿಂದ ಸ್ನೇಹಿತರಿಂದ 'ಮುಂಗಾರು ಮಳೆ'ಯ ಬಗ್ಗೆ ಸಿಕ್ಕಾಪಟ್ಟೆ ಉತ್ತಮ ಪ್ರತಿಕ್ರಿಯೆ ಬರಲು ಶುರು ಆಯ್ತು. ಕೆಲವರಂತೂ 'ಈ ಸಿನೆಮಾ ನೋಡದಿದ್ರೆ ನಿನ್ನ ಕನ್ನಡಾಭಿಮಾನವನ್ನೇ ಪ್ರಶ್ನಿಸಬೇಕಾಗುತ್ತೆ!' ಅಂತ ಬೆದರಿಕೆ ಹಾಕಿದ್ರು. ಇತ್ತೀಚೆಗಂತೂ ಕನ್ನಡ ಸಿನೆಮಾ ನೋಡೋ ಅಭ್ಯಾಸವೇ ಇಲ್ಲ (ಇಂಗ್ಲಿಷ್ ಬಿಟ್ರೆ ಬೇರೆ ಯಾವುದೇ ಭಾಷೆ ಸಿನೆಮಾ ನೋಡಲ್ಲ..).

ಇದರ ಜೊತೆಗೆ ನನ್ನ ಮೆಚ್ಚಿನ ಅಂಕಣಕಾರ ಪ್ರತಾಪ್ ಸಿಂಹ ಇದರ ಬಗ್ಗೆ ಬರೆದ ಮೇಲಂತೂ ಈ ಸಿನೆಮಾ ಬಗೆಗಿನ ಕುತೂಹಲ ಜಾಸ್ತಿ ಆಯ್ತು. ಹಾಡುಗಳನ್ನು ಇಂಟರ್ ನೆಟ್ ಮೂಲಕ ಕೇಳಿದೆ. ಅಷ್ಟು ಇಷ್ಟ ಆಗಲಿಲ್ಲ. ಆದರೂ ಆಫೀಸ್ ಕನ್ನಡಿಗ ಈ-ಮೈಲ್ ಲಿಸ್ಟ್ ನಲ್ಲಿ ಹಾಡುಗಳ ಸಾಹಿತ್ಯ, ಚಿತ್ರದ ಸಂಭಾಷಣೆಗಳ ಕಾಟ ಜಾಸ್ತಿ ಆಗ್ತಾನೇ ಇತ್ತು!

ಕಡೆಗೂ ನಿನ್ನೆ ಪಿವಿಆರ್ ನಲ್ಲಿ ಈ ಸಿನೆಮಾಕ್ಕೆ ಹೋದೆ. ಮೊದಲ ಭಾಗ ನೋಡಿದಾಗ ಚಿತ್ರ ಕೆಟ್ಟದಾಗಿಲ್ಲದಿದ್ರೂ ಇದೇನೂ ಬೇರೆ ಚಿತ್ರಗಳಿಗಿಂತ ಬೇರೆ ಅಲ್ಲ ಅನ್ನಿಸ್ತು. ಜೊತೆಗೆ ಮಿತ್ರ ಅವಿನಾಶ್ ಮೇಲೆ ಕೋಪನೂ ಬಂತು! ಇವರಂತೂ ಈ ಸಿನೆಮಾ ಬಗ್ಗೆ ಎಷ್ಟು ತರಹ ಹೊಗಳಿದ್ದರು ಎಂದರೆ, ನಿರ್ಮಾಪಕರು ಬೇರೆ ಜಾಹಿರಾತು ಕೊಡೋ ಬದ್ಲು ಇವರಿಗೆ ದುಡ್ಡು ಕೊಟ್ಟು ಎಲ್ಲ ಕಡೆ ಮಾತಾಡಿ ಅನ್ಬೇಕಿತ್ತು!

ದುಡ್ಡು ತೆತ್ತ ತಪ್ಪಿಗೆ ನೋಡೋಣ ಅಂತ ವಿರಾಮದ ನಂತರ ಕೂತೆ. ಸಿನೆಮಾದ track ಬದಲಾಗ್ ಹೋಯಿತು.. ಕತೆ ಹೊಸದಲ್ಲದಿದ್ರೂ ಸಂಭಾಷಣೆ, ಹಾಡುಗಳು, ಸಂಗೀತ ಎಲ್ಲ ಅದ್ಭುತವಾಗಿವೆ ಅನ್ಸೋಕ್ ಶುರು ಆಯ್ತು. 'ಕಾಮೆಡಿ ಟೈಮ್' ಗಣೇಶ್ ಅಭಿನಯವಂತೂ ತುಂಬ ಸಹಜ ಎನ್ನುವಷ್ಟರ ಮಟ್ಟಿಗೆ ಇದೆ. ಬೇರೆ ನಮ್ ನಾಯಕನಟರನ್ನು ಹಾಕ್ಕೊಂಡಿದ್ರೆ ಅತ್ತು, ನಮಗೂ ಅಳು ಬರಿಸಿ, ಪೂರ್ತಿ sentimental ಆಗಿ dialogue ಹೊಡೆಯೋಕ್ ಹಚ್ಚ್ಕೊಂಡ್ ಇರೋರು! ನಿರ್ದೇಶನ ಸಹ ಅಷ್ಟೆ, ಸಕತ್ ಬಿಗಿಯಾಗಿದೆ. ಸುಮ್ ಸುಮ್ನೆ ಕೆಟ್ದಾಗಿ ಹಾಡ್ ಸೇರ್ಸೋದು, ಪ್ರೇಮಿಯ ತೊಳಲಾಟವನ್ನು ಬೇರೆಯವರ ಜೊತೆ (ಸಿನೆಮಾದ) ಅರ್ಧಘಂಟೆ ಕುಯ್ಯೋದು, 'ತ್ಯಾಗ',ಸತ್ ಹೋಗ್ತೀನಿ ಅಂತ senti ಹೊಡೆಯೋದು ಏನೂ ಇಲ್ಲಿಲ್ಲ.. ಆದ್ರೂ ಇವೆಲ್ಲ ಇದೆ, ಮತ್ತು ಬೇಗ move ಆಗತ್ತೆ! ನಾಯಕ ತನ್ನ ಸಮಸ್ಯೆಯನ್ನು ಒಂದು ಬಾರಿ ಅಮ್ಮನ ಜೊತೆ ಹಂಚಿಕೊಳ್ಳೋದ್ ಬಿಟ್ರೆ, ಸುಮ್ನೆ ಅವನಿಗನ್ನಿಸಿದ್ ಹಾಗೆ ಮಾಡ್ತಾನೆ ಮತ್ತು ತುಂಬಾ practical ಆಗ್ತಾನೆ. ಕಡೆಯ ಬಾರಿ ನಾಯಕಿಯನ್ನುಭೇಟಿ ಮಾಡಿದಾಗಲೂ ಅಷ್ಟೆ, non-sense ಸಂಭಾಷಣೆ ಇಲ್ಲ.

ಇಷ್ಟೆಲ್ಲ practical ಆಗಿದ್ರೂ, ಸಿನೆಮಾದಲ್ಲಿ, ಸಂತೋಷ, ದುಃಖ, ವಿರಹ ವೇದನೆ ಎಲ್ಲ ಇದೆ, ಆದ್ರೆ ಯಾವ್ದೂ ಅತಿರೇಕಕ್ಕೆ ಹೋಗಿಲ್ಲ. ಅದಕ್ಕೆ ಇದು ಜನಕ್ಕೆ ಇಷ್ಟ ಆಗಿರೋದು. ಈ ರೀತಿ ಸಿನೆಮಾ ಭಾರತದ ಇನ್ಯಾವುದೇ ಭಾಷೆಯಲ್ಲಿ ಇರುವ, ನೋಡಿದ ಬಗ್ಗೆ ನಾನು ಕೇಳಿಲ್ಲ. ಆದ್ದರಿಂದ ಇದು ನಮ್ಮವರದೇ ಹೊಸ ಪ್ರಯೋಗ ಅಂತ ಅಂದ್ಕೊಂಡಿದೀನಿ.

ಹಾಡುಗಳ ಬಗ್ಗೆಯಂತೂ ನಾನ್ ಏನೂ ಹೇಳ್ಬೇಕಾಗಿಲ್ಲ. ಈಗಾಗ್ಲೆ ಎಲ್ಲರ player ನಲ್ಲಿ, ಎಫ್.ಎಮ್.ನಲ್ಲಿ ಮೂಡಿ ಬರುವ ಹಾಡೇ ಮುಂಗಾರು ಮಳೆಯದ್ದು. ಡಿಜಿಟಲ್ ಡಾಲ್ಬಿ ೭ ರಲ್ಲಿ ಹಾಡು ಕೇಳಿದ್ ಮೇಲೆ, ಸಾಹಿತ್ಯ ಕೂಡ ಇಷ್ಟ ಆಗಿದೆ!

ನಿರ್ಮಾಪಕ, ನಿರ್ದೇಶಕರು ಇಷ್ಟು risk ತೊಗೊಂಡು ಗಣೇಶ್ ಗೆ ನಾಯಕ-ನಟ ಕೊಟ್ಟಿರುವಾಗ, ಮೊದಲರ್ಧದ ಕೆಲವು ಭಾಗವನ್ನು ತೆಗೆದು 'ಇಂಗ್ಲಿಷ್' ಸಿನೆಮಾ ತರಹ ಮಧ್ಯಂತರ ವಿರಾಮ ಇಲ್ದೇ ಇರೋ ಕನ್ನಡ ಸಿನೆಮಾ ಕೊಟ್ಟಿದ್ರೆ ಚೆನ್ನಾಗಿರ್ತಿತ್ತು. ಗಾಯಕರ ವಿಷಯದಲ್ಲಂತೂ ಪಕ್ಕಾ ಮೋಸ. ಹೇಮಂತ್ ಗೆ 'ಅನಿಸುತಿದೆ ಯಾಕೋ', ರಾಜೇಶ್ ಗೆ 'ಮುಂಗಾರು ಮಳೆ' ಕೊಡ್ಬೇಕಿತ್ತು. star-power ಅನ್ನೋದ್ ಬಿಟ್ರೆ, ಉದಿತ್ ನಾರಾಯಣ್ ಗಾಯನದಲ್ಲಿ ಭಾವವಿಲ್ಲ. ಸೋನು ನಿಗಮ್ ಓಕೆ. ಶ್ರೇಯಾ ಘೋಷಾಲ್ ಚೆನ್ನಾಗಿ ಹಾಡಿದ್ದಾರೆ - ಆದ್ರೂ ನಂದಿತಾ, ಶಮಿತಾ, ಸುಪ್ರಿಯಾ ಯಾರೂ ನೆನಪಿಗೆ ಬರಲಿಲ್ವಾ?

ನನ್ rating 9/10.

--
ಬಾಡದಿರು ಸ್ನೇಹದ ಹೂವೆ, ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ..ಹೀಗೆ ಸುಮ್ಮನೆ
--

Sunday, March 11, 2007

ಎಡ - ಬಲ

ಸುಮಾರು ಆರು-ಏಳು ವರ್ಷಗಳ ಹಿಂದೆ..ಸ್ನೇಹಿತರೊಡನೆ ಬೆಂಗಳೂರಿನ ಜಯನಗರದಿಂದ ಬಸವನಗುಡಿಗೆ ಆಟೋರಿಕ್ಷಾ ನಲ್ಲಿ ಹೋಗುತ್ತಿದ್ದೆವು. ನನ್ ಸ್ನೇಹಿತ ಆಟೋಚಾಲಕನಿಗೆ, ಇಲ್ಲಿ ಎಡಕ್ಕೆ ಹೋಗಿ ಎಂದ. ಚಾಲಕ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ' ಸಾರ್, ಎಡ-ಬಲ ಅಂತ ಹೇಳಿ confuse ಮಾಡ್ಬೇಡಿ. right-ಒ, left-ಒ ಹೇಳಿ ಸಾರ್' ಅಂದ!

೯೯-೦೦ ನಲ್ಲಿ ಈ ಘಟನೆ ನಡೆದಾಗ, ಇದೊಂದು ಅಪರೂಪದ ಘಟನೆ, ಬೆಂಗಳೂರಿನಲ್ಲಿ ಈ ರೀತಿಯಾಗಲು ಸಾಧ್ಯವೇ ಇಲ್ಲ ಎಂದೆನಿಸಿತ್ತು. ಕನ್ನಡ ಜನಗಳಂತೂ ಈ ರೀತಿಯಾಗಲ್ಲ ಅಂದೆನಿಸಿತ್ತು.

೨೦೦೫...ಮತ್ತೆ ಬೆಂಗಳೂರಿನಲ್ಲಿ ಆಟೋ ಪ್ರಯಾಣ ಶುರು ಆಯಿತು. exception ಆಗಿದ್ದ left-right, ಈಗ norm ಆಗಿಬಿಟ್ಟಿದೆ . ಎಡ, ಬಲ ಅಂದ್ರೆ ಅರ್ಥ ಆಗೋದೇ ಇಲ್ಲ ಜನಕ್ಕೆ. ಇಲ್ಲಿ ಕೇವಲ ಆಟೋಚಾಲಕರ ಬಗ್ಗೆ ಹೇಳುತ್ತಿಲ್ಲ, ನಾವೆಲ್ಲರೂ ಹೀಗೇ ಆಗ್ಬಿಟ್ಟಿದೀವಿ. ಒಂದ್ ಕಡೆ ಇಂಗ್ಲಿಷ್ ಸರಿಯಾಗಿ ಮಾತಾಡಕ್ಕೆ ಬರಲ್ಲ, ಕನ್ನಡವನ್ನೂ ಹದಗೆಡಸಿಯಾಗಿದೆ. ನಾನೇನು ಎಲ್ಲವೂ ಅಚ್ಚ ಕನ್ನಡವೇ ಬೇಕು ಅಂತ ವಾದಿಸಲ್ಲ. ಹೊಸದನ್ನು ಬೇರೆ ಭಾಷೆಗಳಿಂದ ಪಡೆಯೋಣ. ಆ ಪದಗಳನ್ನೇ ಕನ್ನಡೀಕರಣಗೊಳಿಸೋಣ (ಉದಾ: ಬಸ್, ಕಂಪ್ಯೂಟರ್, ಕ್ಯಾರೆಟ್, ಟೊಮೇಟೊ), ಆದರೆ ಮೂಲಭಾಷೆಯ ಎಡ, ಬಲ, ಚಿಲ್ಲರೆ, ಹತ್ತು, ಐವತ್ತು ಎಂಬುವನ್ನೇ ನಾವು left, right, change, ten, fifty ಮಾಡಿದ್ರೆ ಹೇಗೆ? ಇದು ಬೆಳವಣಿಗೆಯೋ ಅಥವಾ ..?

ದುಖಃದ ಸಂಗತಿ ಎಂದರೆ ಇದರ ಹಾವಳಿ ಬೇರೆ ನಗರ, ಪಟ್ಟಣಗಳಿಗೂ ಹರಡಿವೆ। ಇಂಗ್ಲಿಷ್ ವ್ಯಾಮೋಹ ಕೇವಲ ಭಾಷೆಗಷ್ಟೇ ಸೀಮಿತವಾಗಿದೆ (ಜ್ಞಾನಕ್ಕಂತೂ ಅಲ್ಲ). ಮಕ್ಕಳಿಗೆ ಬೇಕಾದುದು ಉತ್ತಮ ಗಣಿತ, ವಿಜ್ಞಾನ ಕಲಿಕೆ. ಆ ನಿಟ್ಟಿನಂತಲ್ಲೂ ಸರ್ಕಾರವಾಗಲೀ, ಖಾಸಗಿ ಶಿಕ್ಷಣ ಕೇಂದ್ರಗಳಾಗಲೀ ಪ್ರಯತ್ನಿಸುತ್ತಿಲ್ಲ.

ನಮ್ಮ ಸಂಸ್ಥೆಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ , ಟಿ. ಎನ್. ಸೀತಾರಾಮ್ ಅವರು ಸಂವಾದದಲ್ಲಿ ಒಂದು ಪ್ರಶ್ನೆಗೆ ಉತ್ತರವಾಗಿ ಹೀಗೆ ಹೇಳಿದ್ರು.. " ನಮ್ಮೆಲ್ಲರ ಕನ್ನಡ ಪ್ರಜ್ಞೆ ಹೇಗಿದೆಯೆಂದರೆ ಮನೆ ಮುಂದೆ ಬರುವ ಸೊಪ್ಪಿನವಳ ಜೊತೆ 'ಟು ರುಪೀಸ್' ಅಂತ ಇಂಗ್ಲಿಷ್ ನಲ್ಲಿ ಮಾತಾಡ್ತೀವಿ. ಬೆಲೆ ಜಾಸ್ತಿ ಅನಿಸಿದ್ರೆ ಚೌಕಾಸಿ ಮಾಡಕ್ಕೆ 'ಎಂಟಾಣೆ ಕಡಿಮೆ ಮಾಡ್ಕೋಮ್ಮಾ' ಅಂತೀವಿ! ಹೇಗಿದೆ ನಮ್ಮ ಕನ್ನಡ ಪ್ರಜ್ಞೆ!

ಈ ಹುಚ್ಚುತನವು ಹರಿಯುವ ನದಿಯೋ ಅಥವಾ ಇಲ್ಲೇ ಇರುವುದಕ್ಕೆ ಬಂದಿರುವುದೋ?